Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಇತರ ಜಿಲ್ಲಾ ಸುದ್ದಿ
    • ಸಿನೆಮಾ
    • ರಾಜ್ಯ
    • ರಾಷ್ಟ್ರೀಯ
    • ಕ್ರೀಡಾ ಸುದ್ದಿ
    • EPaper
    Facebook X (Twitter) Instagram
    Sanjedarshan
    Home»ಲೇಖನಗಳು»ಇಂದು ವಿಶ್ವ ಸಂಗೀತ ದಿನ
    ಲೇಖನಗಳು

    ಇಂದು ವಿಶ್ವ ಸಂಗೀತ ದಿನ

    SanjeBy SanjeJune 20, 20254 Mins Read
    ವಿಶ್ವ ಸಂಗೀತ ದಿನ

    ಇಂದು (ಜೂನ್-21) ವಿಶ್ವ ಸಂಗೀತ ದಿನ ಸಂಗೀತದ ಮೂಲಕ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದು (Healing Through Harmony) ಎಂಬುದು ಈ ವರ್ಷದ  ಘೋಷ ವಾಕ್ಯ. ದೈಹಿಕವಾಗಿ ಆಘಾತಕ್ಕೊಳಗಾದವರು, ಮಾನಸಿಕವಾಗಿ ನೋವನ್ನು ಅನುಭವಿಸಿದವರು ಮತ್ತು ಕಲುಷಿತಗೊಂಡಿರುವ ಸಮಾಜವನ್ನು ಸರಿದಾರಿಗೆ ತರುವುದು ಕೇವಲ ಸಂಗೀತವೆಂಬ ನಾದ ಝೇಂಕಾರ ದಿಂದವೆಂಬುದು ಈ ದಿನದ ವಿಶ್ವಸಂಗೀತದ ಮೂಲಧ್ಯೇಯ. ದೈಹಿಕವಾಗಿ ಸಧೃಡವಾಗಿದ್ದು ಮಾನಸಿಕವಾಗಿ ನೊಂದಿರುವವರು, ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲವುಳ್ಳವರಾಗಿದ್ದು ಸಾಮಾಜಿಕವಾಗಿ ನೋವನುಂಡವರು ನೆಮ್ಮದಿಯಿಂದ ಬದುಕಲು ಬೇಕಾಗಿರುವ ಏಕಮೇವ  ಚಿಕಿತ್ಸೆ ಎಂದರೆ  ನಾದಾನಂದ ವೆಂಬುದು ಇಂದಿನ ತುರ್ತು ಸಂದೇಶವಾಗಿದೆ. ಇಂದು ವಿಶ್ವಯೋಗ ದಿನವೂ ಇರುವುದು ಯೋಗಾಯೋಗವೆನ್ನಬೇಕು. ನಾದ ಮತ್ತು ಯೋಗಗಳೆರಡರ ಗುರಿ ಒಂದೇ ಅದು ಮನಸ್ಸಿಗೆ ನೆಮ್ಮದಿ ನೀಡುವುದು. ಅವೆರಡನ್ನು ಸಾಧಿಸುವತ್ತ ಮನುಷ್ಯ ತನ್ನ ಜೀವನದ ಜಂಜಡದಿಂದ ಮುಕ್ತನಾಗುವುದು. ಈ ಎರಡೂ ದಿನಗಳ ಆಚರಣೆಯ ಮುಖ್ಯಧ್ಯೇಯವಾಗಿದೆ. ಭಾರತವನ್ನೊಳಗೊಂಡು ವಿಶ್ವದ ನೂರಿಪ್ಪತ್ತು ರಾಷ್ಟ್ರಗಳು ಇಂದು ವಿಶ್ವಸಂಗೀತದಿನ ಆಚರಿಸುತ್ತಿವೆ.

    ಮಾನವನಾದಿಯಾಗಿ ಪಶು, ಪಕ್ಷಿ, ಪ್ರಾಣಿ ಮತ್ತು ಸಸ್ಯ ಮೊದಲಾದ ಜೀವ ಸಂಕುಲಕ್ಕೆ ಅದರ ಪ್ರಭಾವ ಅಧಿಕ. ಹರಿವ ನೀರು, ಬೀಸುವ ಗಾಳಿ, ಗುಡುಗು, ಸಿಡಿಲು, ಮಿಂಚು, ಸಮುದ್ರದ ಅಲೆಗಳ ಅಬ್ಬರ, ಕೋಗಿಲೆ, ಕಾಜಾಣಗಳ ಇಂಚರ, ನವಿಲಿನ ನಾಟ್ಯ, ನಿಶ್ಚಿತಲಯದಲ್ಲಿ ತಿರುಗುವ ಭೂಮಿ, ಸೂರ್ಯ-ಚಂದ್ರ, ಗ್ರಹ-ನಕ್ಷತ್ರಾದಿಗಳೆಲ್ಲವೂ ಪ್ರಕೃತಿಯ ಸಂಗೀತವೆನಿಸಿವೆ. ಸಂಗೀತದ ಮೂಲ ನಾದ ಮತ್ತು ಲಯ. ಅವುಗಳಿಗೆ ಭಾಷೆ, ವೇಷ, ಗಡಿ, ಪ್ರದೇಶ, ಬಡವ-ಶ್ರೀಮಂತ, ಮೇಲು, ಕೀಳು, ಹೆಣ್ಣು-ಗಂಡೆಂಬ ಯಾವುದೇ ಭೇದಗಳಿಲ್ಲ. ಮನಸ್ಸು, ಹೃದಯ ಮತ್ತು ಸಂವೇದನಾಶೀಲ ಭಾವನೆಗಳುಳ್ಳ ಪ್ರತಿಯೊಬ್ಬ ಮಾನವ ಜೀವಿಯ ಮೇಲೂ ಅದರ ಪ್ರಭಾವ ಅಧಿಕ. ನಾವು ನಡೆವಲ್ಲಿ, ನುಡಿವಲ್ಲಿ, ಏಕಾಂತದಲ್ಲಿ ನಮಗರಿವಿಲ್ಲದೆಯೇ ನಮ್ಮ ಬಾಯಿಂದ ಹಾಡು ಹೊರ ಹೊಮ್ಮುತ್ತದೆ. ಹಾಡನ್ನು ಕೇಳದೇ ಇರುವ, ತನ್ನಷ್ಟಕ್ಕೆ ತಾನೆ ಹಾಡನ್ನು ಹಾಡದೇ ಇರುವ ಮನುಷ್ಯ ಜಗತ್ತಿನಲ್ಲಿ ಇಲ್ಲವೇ ಇಲ್ಲವೆನ್ನಬೇಕು.

    ನಮ್ಮ ಹುಟ್ಟಿನೊಡನೆಯೇ ಕೇಳಿ ಬರುವ ತಾಯಿಯ ಜೋಗಳ ಹಾಡಿನಿಂದ ಆರಂಭಗೊಳ್ಳುವ ನಮ್ಮ ಬಾಳಪಯಣ, ಮದುವೆ, ಮುಂಜಿವೆ, ಜಾತ್ರೆ, ಉತ್ಸವ ಕೊನೆಗೆ ಅಂತಿಮ ಯಾತ್ರೆಯವರೆಗೂ ನಾದದ ಅಲೆಗಳ ನಿನಾದ ನಮ್ಮೊಡನೆ ಹಾಸು ಹೊಕ್ಕಾಗಿರುತ್ತದೆ. ಸಂಗೀತ ನಮ್ಮ ಬದುಕಿನ ಒಂದು ಅವಿಭಾಜ್ಯ ಅಂಗವಾಗಿ ನಮಗರಿವಿಲ್ಲದಂತೆ ನಮ್ಮೊಡನೆ ಬೆರೆತುಕೊಂಡಿದೆ. ಅಂತಹ ಸಂಗೀತವನ್ನು ಏಕಕಾಲಕ್ಕೆ ಆನಂದಿಸುವ, ಆಸ್ವಾದಿಸುವ ದಿನವೇ ವಿಶ್ವ ಸಂಗೀತ ದಿನ.

    ವಿಶ್ವ ಸಂಗೀತ ದಿನದ ಹುಟ್ಟು:

    ವಿಶ್ವ ಸಂಗೀತ ದಿನದ ಆಚರಣೆಯ ವಿಚಾರ ಮೊದಲು ಹೊಳೆದದ್ದು ಫ್ರಾನ್ಸಿನಲ್ಲಿ; ೧೯೭೦ರಲ್ಲಿ. ಫ್ರಾನ್ಸಿನ ರೇಡಿಯೋ ಕೇಂದ್ರದಲ್ಲಿ ಸಂಗೀತಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಜೋಯೆಲ್ ಕೋಹೆನ್ ಎಂಬಾತ ಜೂನ್ ೨೧ರ ಸಂಜೆ ಬೇಸಿಗೆಯ ಮೊದಲ ದಿನವನ್ನು ಬ್ಯಾಂಡ್ ನುಡಿಸುತ್ತ ಸ್ವಾಗತಿಸಿದ. ಪ್ರತಿವರ್ಷ ಅವನು ಆ ದಿನದಂದು ಸಮಾನಾಸಕ್ತ ವೃತ್ತಿ ಹಾಗೂ ಹವ್ಯಾಸಿ ಸಂಗೀತಗಾರರನ್ನು ಸೇರಿಸಿಕೊಂಡು ಬ್ಯಾಂಡ್‌ವೃಂದದ ಮೂಲಕ ಫೇ ಟೇ ಡೇ ಲಾ ಮ್ಯೂಜಿಕ್ (Fe te de la Musique) ಎಂಬ ಫ್ರೆಂಚ್ ಭಾಷೆಯ ಸಂಗೀತ ಉತ್ಸವ (Festival of Music) ಮೂಲಕ ಆಚರಿಸಿದ. ಅವನ ಈ ಸಂಗೀತೋತ್ಸವ ೧೯೮೨ರಲ್ಲಿ ಫ್ರಾನ್ಸ್ ಸರ್ಕಾರದ ಸಂಸ್ಕೃತಿ ಇಲಾಖೆಯ ಸಚಿವ ಜಾಕ್ ಲಾಂಗ ( Jack Lang) ಮತ್ತು ಫ್ರೇಂಚ ಮ್ಯೂಜಿಕ್ ಕಂಪೋಜರ್ ಮತ್ತು ಪತ್ರಕರ್ತ ಮೌರೀಸ್ ಪ್ಲೆಯುರೆಟ್ (Maurice Fleuret) ಅವರುಗಳ ಸಹಯೋಗದಲ್ಲಿ ಪ್ಯಾರೀಸ್‌ನ ಮುಖ್ಯ ಬೀದಿಯಲ್ಲಿ ಸಾಮೂಹಿಕವಾಗಿ ಬ್ಯಾಂಡ್ ಮೂಲಕ ಸಂಗೀತ ಉತ್ಸವ ನೆರವೇರಿಸಿದ. ೧೯೮೫ರಲ್ಲಿ ಯುರೋಪ ಸಂಗೀತ ವರ್ಷವೆಂದು, ೧೯೯೭ರಲ್ಲಿ ಬುಡಾಪೇಸ್ಟ್‌ದಲ್ಲಿ ಯುರೋಪಿನ ಸಂಗೀತ ಪಾರ್ಟಿ ಹೆಸರಿನಲ್ಲಿ ಯುರೀಪೇತರ ಎಲ್ಲ ರಾಷ್ಟ್ರಗಳ ಸಂಗೀತಗಾರರೆಲ್ಲ ಸೇರಿ ವಿಶ್ವ ಸಂಗೀತ ದಿನವನ್ನಾಗಿ ಆಚರಿಸಿದರು. ಫೇಟೆ ಡೇ ಲಾ ಮ್ಯೂಜಿಕ್ ಉತ್ಸವ ವಿಶ್ವ ಸಂಗೀತ ದಿನವನ್ನಾಗಿ ವಿಶ್ವದ 120 ರಾಷ್ಟ್ರಗಳು ಆಚರಿಸಿದವು. ಸಹಸ್ರಾರು ಸಂಖ್ಯೆಯ ಸಂಗೀತಗಾರರು ಇಡೀ ಒಂದು ರಾತ್ರಿ ಫ್ರಾನ್ಸ್‌ನ ಮುಖ್ಯ ಬೀದಿಯಲ್ಲಿ ಹಾಡುತ್ತ, ವಾದ್ಯ ನುಡಿಸುತ್ತ ಐದು ಮಿಲಿಯನ್ ಸಂಖ್ಯೆಯ ಶ್ರೋತೃಗಳಿಗೆ ಸಂಗೀತದ ರಸದೌತಣವನ್ನು ಉಣಬಡಿಸಿದರು.

    ಜಾಗತಿಕ ಶಾಂತಿ ಮತ್ತು ಸಂಗೀತದ ಮೂಲಕ ವಿಶ್ವಭಾತೃತ್ವ ವೆಂಬ ಸಂದೇಶದೊಂದಿಗೆ ಪ್ರಾರಂಭಗೊಂಡ ವಿಶ್ವಸಂಗೀತ ದಿನಾಚರಣೆಯು 1982ರಿಂದೀಚೆಗೆ ಭಾರತವನ್ನೊಳಗೊಂಡು ಇಟಲಿ, ಗ್ರೀಸ್, ರಶಿಯಾ, ಪೆರು, ಬ್ರಾಜಿಲ್, ಮೆಕ್ಸಿಕೋ, ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್, ಲುಕ್ಸ್‌ಮ್‌ಬರ್ಗ್, ಜರ್ಮನಿ, ಸ್ಟಿಟಝರ್‌ಲ್ಯಾಂಡ್, ಯು.ಎಸ್, ಯು.ಕೆ., ಚೈನಾ ಮತ್ತು ಲೆಬನಾನ ಮುಂತಾದ 32 ರಾಷ್ಟ್ರಗಳಲ್ಲಿ ವಿಶ್ವಸಂಗೀತ ದಿನವನ್ನು ಆಚರಿಸಲಾಗುತ್ತಿದೆ. ವಿವಿಧತೆಯಲ್ಲಿ ಏಕತೆಯನ್ನು, ಸಂಗೀತದ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಭಾರತವನ್ನೊಳಗೊಂಡು ವಿಶ್ವದ ಅನೇಕ ರಾಷ್ಟ್ರಗಳ ಒಂದು ಸಾವಿರ ಪಟ್ಟಣಗಳಲ್ಲಿ ಪ್ರತಿ ವರ್ಷ ವಿಶ್ವಸಂಗೀತದಿನವನ್ನಾಚರಿಸಲಾಗಿದೆ. ಕಳೆದ ಮೂರು ದಶಕಗಳಿಂದ ವಿಶ್ವದ 120 ವಿವಿಧ ರಾಷ್ಟ್ರಗಳಲ್ಲಿ ‘NAMM’ (National Association of Music Merchants) ಸಂಸ್ಥೆಯ ಪ್ರಾಯೋಜಕತ್ವದೊಂದಿಗೆ ವಿಶ್ವ ಸಂಗೀತ ದಿನ ಆಚರಿಸಲಾಗುತ್ತಿದೆ.

    ಧ್ಯೇಯ:

    ವೃತ್ತಿ ಮತ್ತು ಹವ್ಯಾಸಿ ಸಂಗೀತಗಾರರು ಒಟ್ಟಾಗಿ ಸೇರಿ ನಗರದ ಮುಖ್ಯ ಬೀದಿಗಳಲ್ಲಿ ಹಾಡುತ್ತಾ ವಾದ್ಯಗಳನ್ನು ನುಡಿಸುತ್ತ ಜನಸಾಮಾನ್ಯರಲ್ಲಿ ಸಂಗೀತದ ಅಭಿರುಚಿಯನ್ನು, ಅದರ ಮಹತ್ವವನ್ನು ಸಾರಿ ಹೇಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ಸಮಾರಂಭಗಳನ್ನು ಏರ್ಪಡಿಸಿ ಸಂಗೀತ ಕಲೆಯ ಬಗ್ಗೆ ಜಾಗೃತಿ ಮೂಡಿಸುವುದು, ಇಂತಹ ಸಮಾರಂಭಗಳಲ್ಲಿ ಸಂಗೀತಗಾರರು ಉಚಿತವಾಗಿ ಸಂಗೀತ ಕಾರ್ಯಕ್ರಮ ನೀಡುವುದು, ಎಲ್ಲರೂ ಸೇರಿ ಸಂಗೀತ ಸೃಷ್ಟಿಸುವ ದಿನವನ್ನಾಗಿ (Make Music Day OR International Music Day) ಆಚರಿಸುವುದು ವಿಶ್ವಸಂಗೀತ ದಿನಾಚರಣೆಯ ಮುಖ್ಯಧ್ಯೇಯಗಳಾಗಿವೆ.

    ಕೊಡುಗೆ:

    ಭಾರತದೇಶ ಅನಾದಿಕಾಲದಿಂದಲೂ ಸಂಗೀತದ ಮೂಲಕ ಜಗತ್ತಿಗೆ ಶಾಂತಿಯ ಸಂದೇಶ ನೀಡುತ್ತಲೆ ಬಂದಿದೆ. ವಿಶ್ವಕ್ಕೆ ಭಾರತೀಯ ಸಂಗೀತದ ಕೊಡುಗೆ ಅಪಾರ. ಸಂಗೀತ ಮತ್ತು ಸಂಗೀತಶಾಸ್ತ್ರ  ಗ್ರಂಥಗಳ ಮೂಲಕ ಭಾರತ ವಿಶ್ವಕ್ಕೆ ಗುರುವಾಗಿದೆ. ಭಾರತೀಯ ಸಂಗೀತಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ ಭರತ, ನಾರದ, ಸಾರಂಗದೇವ, ಮತಂಗ, ರಾಮಾಮಾತ್ಯ, ಕಲ್ಲಿನಾಥ, ಕೋಹಲ, ದತ್ತಿಲ, ಸರ್ವಜ್ಞ ಸೋಮೇಶ್ವರ, ಜಗದೇಕಮಲ್ಲ, ಪುಂಡರೀಕವಿಠಲ, ದಾಮೋದರ, ನಾನ್ಯದೇವ ಮುಂತಾದ ಸಂಗೀತ ಕ್ಷೇತ್ರದ ಪೂರ್ವಾಚಾರ್ಯರು, ಜಯದೇವ, ಸ್ವಾಮಿ ಹರಿದಾಸ, ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ, ಶ್ಯಾಮಾಶಾಸ್ತ್ರಿ, ಕ್ಷೇತ್ರಜ್ಞ, ಪುರಂದರದಾಸರು, ನಿಜಗುಣಶಿವಯೋಗಿ ಮುಂತಾದ ಸಂಗೀತ ಆಚಾರ್ಯರು,

    ತಾನಸೇನ,  ಬಕ್ಷೂ, ಭೈಜೂಬಾವರಾ, ಗೋಪಾಲನಾಯಕರಂತಹ ಶ್ರೇಷ್ಠ ಸಂಗೀತಗಾರರು. ವಿಷ್ಣುನಾರಾಯಣ ಭಾತಖಂಡೆ, ವಿಷ್ಣು ದಿಗಂಬರ ಫಲುಸ್ಕರ ಗಾನಯೋಗಿ ಪಂ.ಪಂಚಾಕ್ಷರಗವಾಯಿಗಳಂತಹ ಸಂಗೀತೋದ್ಧಾರಕರು, ಸದಾರಂಗ, ಅದಾರಂಗ, ಮನರಂಗ, ದಿಲರಂಗರಂತಹ ವಾಗ್ಗೇಯಕಾರರು, ಅಲ್ಲಾವುದ್ದೀನ್‌ಖಾನ್, ಅಲ್ಲಾದಿಯಾಖಾನ್, ಅಬ್ದುಲ್ ಕರೀಮ್‌ಖಾನ್, ಎಂ.ಎಸ್.ಸುಬ್ಬಲಕ್ಷ್ಮೀ, ಬಿಸ್ಮಿಲ್ಲಾಖಾನ, ರವಿಶಂಕರ, ವಿಲಾಯತ್‌ಖಾನ್, ಸವಾಯಿ ಗಂಧರ್ವ, ನೀಲಕಂಠಬುವಾ ಆಲೂರಮಠ, ಭಾಸ್ಕರಬುವಾ ಬಖಲೆ, ಮಲ್ಲಿಕಾರ್ಜುನ ಮನಸೂರ, ಪುಟ್ಟರಾಜಕವಿ ಗವಾಯಿ, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್ಲ, ಭೀಮಸೇನ ಜೋಶಿ, ಕುಮಾರ ಗಂಧರ್ವ ಮುಂತಾದ ಸಂಗೀತ ದಿಗ್ಗಜರು ಹಾಡಿ, ನುಡಿಸಿ ಭಾರತದ ನೆಲ ಮೊದಲ್ಗೊಂಡು ವಿಶ್ವದೆಲ್ಲೆಡೆ ಭಾರತದ ಸಂಗಿತವನ್ನು ವಿಶ್ವಮಟ್ಟಕ್ಕೆ ಮೊಳಗಿಸಿದ ಭಾರತೀಯ ಸಂಗೀತಗಾರರು ಸಂಗೀತವೇ ತಮ್ಮ ಉಸಿರನ್ನಾಗಿಸಿ ವಿಶ್ವ ಸಂಗೀತಕ್ಕೆ ನಾದ ನೈವೇದ್ಯ ಸಲ್ಲಿಸಿದ್ದಾರೆ.

    ಇಂದು (ಜೂನ್-21) ವಿಶ್ವಯೋಗ ದಿನವು ಹೌದು. ಅವರೆಡು ಒಂದೇ ದಿನ ಆಚರಿಸಲ್ಪಡುತ್ತಿರುವುದು ಭಾರತೀಯರ ಮಟ್ಟಿಗೆ ಯೋಗಾಯೋಗವೆಂದೇ ಹೇಳಬೇಕು. ನಾದ ಮತ್ತು ಯೋಗ ಅವರೆಡರ ಗುರಿ ಒಂದೇ. ಮನಸ್ಸಿಗೆ ನೆಮ್ಮದಿ ನೀಡುವುದು. ಅವರೆಡನ್ನು ಸಾಧಿಸುವತ್ತ ಮನುಷ್ಯ ತನ್ನ ಜೀವನದ ಜಂಜಡದಿಂದ ಮುಕ್ತನಾಗಿ ಬದುಕಿನಲ್ಲಿ ನೆಮ್ಮದಿ ತಂದುಕೊಳ್ಳುವುದು ಈ ಎರಡೂ ದಿನಗಳ ಆಚರಣೆಯ ಮುಖ್ಯಧ್ಯೇಯ. ಎಲ್ಲರೂ ಈ ಎರಡೂ ಆಚರಣೆಗಳಲ್ಲಿ ಭಾಗಿಯಾಗೋಣ. ಜೈಯೋಗ ! ಜೈ ಸಂಗೀತ.

    ಡಾ.ಸಿದ್ಧರಾಮಯ್ಯ ಮಠಪತಿ (ರುದ್ರಮಠ)
    ವಿಶ್ರಾಂತ ಸಂಗೀತ ಪ್ರಾಧ್ಯಾಪಕರು
    ಹಾಗೂ ಹಿಂದುಸ್ತಾನಿ ಗಾಯಕರು,
    ಬಾಗಲಕೋಟೆ.
    ಮೊಬೈಲ್: 9448923500

    Share. Facebook Twitter Pinterest LinkedIn WhatsApp Reddit Tumblr Email

    Related Posts

    June 21, 2025 ಬಾಗಲಕೋಟೆ

    ಸಾಮರಸ್ಯ ಸಾಧಿಸುವ ವಿಶಿಷ್ಟ ಶಕ್ತಿ ಯೋಗಕ್ಕಿದೆ: ಜೋಶಿ

    June 21, 2025 ಬಾಗಲಕೋಟೆ

    ರೋಗ ಗುಣಪಡಿಸುವ ಶಕ್ತಿ ಯೋಗಕ್ಕಿದೆ: ಭಾಂಡಗೆ

    June 21, 2025 ಬಾಗಲಕೋಟೆ

    ಯೋಗದಿಂದ ವ್ಯಕ್ತಿಯ ಮನೋಬಲ ಹೆಚ್ಚಳ: ಪೇಜಾವರ ಶ್ರೀ

    June 20, 2025 ಬಾಗಲಕೋಟೆ

    ಕನಸು ನನಸು ಮಾಡಿದ ಬಾಗಲಕೋಟೆ ಜಿಲ್ಲೆ: ಜಾನಕಿ ಕೆ.ಎಂ.

    June 19, 2025 ಬಾಗಲಕೋಟೆ

    ನಕಲಿ ರಸಗೊಬ್ಬರ ಪೂರೈಕೆ ತಡೆಗೆ ಆಗ್ರಹ

    June 18, 2025 ಬಾಗಲಕೋಟೆ

    ನೂತನ ಜಿಲ್ಲಾಧಿಕಾರಿ ಸಂಗಪ್ಪ ಎಂ. ಅಧಿಕಾರ ಸ್ವೀಕಾರ

    Facebook X (Twitter) Instagram Pinterest
    • Privacy Policy
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ , ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092

    Type above and press Enter to search. Press Esc to cancel.