ಬಾಗಲಕೋಟೆ: ರಾಜ್ಯದ ೧೨ ಜಿಲ್ಲೆಗಳಲ್ಲಿ ಸಂಚರಿಸುತ್ತಿರುವ ವಂದೇ ಭಾರತ ರೈಲು ಶೀಘ್ರದಲ್ಲಿಯೇ ಬಾಗಲಕೋಟೆಯಿಂದಲೂ ಕೂಡಾ ಸಂಚರಿಸಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಗುರುವಾರ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚ್ಯೂವಲ್ ವೇದಿಕೆ ಮೂಲಕ ಅಮೃತ ಭಾರತ ನಿಲ್ದಾಣ ಯೋಜನೆ ಅಡಿಯಲ್ಲಿ ಪುನರಾಭಿವೃದ್ದಿಗೊಂಡ ೧೦೩ ರೈಲ್ವೆ ನಿಲ್ದಾಣಗಳನ್ನು ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ರೇಲ್ವೆ ಇಲಾಖೆಯಲ್ಲಿ ಕಳೆದ ೧೦ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯ ನಡೆದಿದ್ದು, ಮುಂದಿನ ಜನಾಂಗ ಭವಿಷ್ಯ ರೂಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ರೈಲ್ವೆ ಇಲಾಖೆಯ ಮಹತ್ತರವಾದ ಸಂದೇಶ ಹಾಗೂ ಕಾರ್ಯಗಳನ್ನು ದೇಶವಾಸಿಗಳು ಗಮಿಸುತ್ತಿದ್ದಾರೆ ಎಂದರು.

ದೇಶದಾದ್ಯಂತ ೧೦೩ ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ನಿಲ್ದಾಣ ಯೋಜನೆಯಡಿ ೧೫ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಅದರಲ್ಲಿ ರಾಜ್ಯದ ಬಾಗಲಕೋಟೆ, ಮುನಿರಾಬಾದ್, ಗದಗ, ಧಾರವಾಡ ಹಾಗೂ ಗೋಕಾಕ ಸೇರಿದ್ದು, ಈ ಭಾಗದ ೧೩ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ೩೦೦ ಕೋಟಿ ವೆಚ್ಚದಲ್ಲಿ ಆಧುನಿಕರಣಗೊಳಿಸಲಾಗುತ್ತಿದೆ. ಗದಗ-ವಾಡಿ, ಕುಡಚಿ-ಬಾಗಲಕೋಟೆ ಸೇರಿದಂತೆ ಇನ್ನು ಅನೇಕ ಯೋಜನೆಗಳು ಸೇರಿ ಇಡೀ ರಾಷ್ಟçದಲ್ಲಿ ೪೪೪೦೦೦ ಕಿ.ಮೀಗಳಿಗೆ ೭.೫೦ ಲಕ್ಷ ಕೋಟಿ ರೂ.ಗಳ ಯೋಜನೆ ಕೈಗೆತ್ತಿಗೊಳ್ಳಲಾಗಿದೆ ಎಂದು ಸಚಿವ ಸೋಮಣ್ಣ ಹೇಳಿದರು.
ಈ ಯೋಜನೆಯಲ್ಲಿ ರಾಜ್ಯದಲ್ಲಿ ೪೩ ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅದರಲ್ಲಿ ೧೧ ಯೋಜನೆಗಳನ್ನು ತ್ವರಿತವಾಗಿ ಮುಗಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಈ ೧೧ ಯೋಜನೆಗಳಲ್ಲಿ ಬಾಗಲಕೋಟೆ-ಕುಡಚಿ, ಗದಗ-ಹುಟಗಿ, ಗದಗ-ವಾಡಿ, ರಾಯಚೂರು-ಗಿಣಿಗೇರಾ ಒಳಗೊಂಡ ಕಾಮಗಾರಿಗಳನ್ನು ೩೩ ಸಾವಿರ ಕೋಟಿ ರೂ.ಗಳಲ್ಲಿ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದೆಂದು ಸಚಿವರು ತಿಳಿಸಿದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಬಾಗಲಕೋಟೆ-ಕುಡಚಿ ಮಾರ್ಗ ತೀರ್ವಗತಿಯಲ್ಲಿ ಪ್ರಗತಿ ನಡೆದಿದೆ. ಇದರಿಂದ ಬಾಗಲಕೋಟೆಯ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆದು, ಇಲ್ಲಿಯ ಉತ್ಪನ್ನಗಳಾದ ಸಕ್ಕರೆ, ಸಿಮೆಂಟ್, ಇಳಕಲ್ಲ ಸೀರೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಬಾಗಲಕೋಟೆ ನಗರ ಆಗಾಧವಾಗಿ ಬೆಳೆಯುತ್ತಿದ್ದು, ಇಲ್ಲಿಯ ಕಾರ್ಮಿಕರು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಗುಜರಾತ ಮತ್ತು ರಾಜ್ಯಸ್ಥಾನಕ್ಕೆ ತೆರಳುತ್ತಿದ್ದು, ಅವರಿಗೆ ರೈಲು ಸೇವೆ ಒದಗಿಸಬೇಕು. ಬೆಂಗಳೂರಿನಿAದ ಹುಬ್ಬಳ್ಳಿಗೆ ಜನಶತಾಬ್ದಿ ಎಕ್ಸಪ್ರೆಸ್ ಸೇವೆ, ಗೋಲಗುಂಬಜ ಎಕ್ಸಪ್ರೆಸ್ನಲ್ಲಿ ೧ ಟೈಯರ್ ಎಸಿ, ೨ ಟೈಯರ ಎಸಿ ಕೋಚ್ಗಳು ಒಟ್ಟಿಗೆ ಇರುತ್ತಿದ್ದು, ಅವುಗಳನ್ನು ಪ್ರತ್ಯೇಕ ಮಾಡುವಂತೆ ಮನವಿ ಮಾಡಿದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ರೈಲ್ವೆ ಇಲಾಖೆ ಇತ್ತೀಚಿನ ದಿನಗಳಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದ್ದು, ಇಂದು ಪ್ರಧಾನಮಂತ್ರಿಗಳ ಮುತುವರ್ಜಿಯಿಂದಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಭಾಗದ ಪ್ರಮುಖ ಯೋಜನೆಯಾದ ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ ಪೂರ್ಣಗೊಳಿಸಲು ಮನವಿ ಮಾಡಿದರು.
ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಉಪಾದ್ಯಕ್ಷೆ ಶೋಭಾ ರಾವ್, ಹುಬ್ಬಳ್ಳಿ ರೈಲ್ವೆ ವಿಭಾಗದ ವ್ಯವಸ್ಥಾಪಕಿ ಬೆಲಾ ಮೀನಾ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಬಾಗಲಕೋಟೆ ರೈಲ್ವೆ ನಿಲ್ದಾಣದ ಎಸ್ಆರ್ ಅರವಿಂದ ಹರ್ಲೇ ಸೇರಿದಂತೆ ಇತರರು ಉಪಸ್ಥಿತರಿದ್ದರು.