ಬಾಗಲಕೋಟ: ಯಾವುದೇ ಔಷಧ ಉಪಚಾರ ಇಲ್ಲದೇ ರೋಗವನ್ನು ಗುಣಪಡಿಸು ವಂತಹ ಶಕ್ತಿ ಯೋಗಕ್ಕಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ಯಾವ ಔಷಧಿ ಇರಲಿಲ್ಲ. ಕೇವಲ ಯೋಗ ಹಾಗೂ ಗಿಡಮೂಲಿಕೆಯಿಂದ ಗುಣಪಡಿಸ ಲಾಗುತ್ತಿತ್ತು. ದಿನಿತ್ಯದ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಯೋಗದ ಬಗ್ಗೆ ಜಾಗೃತಿ ಮೂಡಿಸಿ ಅದರ ಮಹತ್ವವನ್ನು ಸಾರುವ ಕಾರ್ಯ ವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿ ಸಂಸ್ಕೃತಿ, ಪರಂಪರೆಯನ್ನು ಹೊಂದಿದ ಭಾರತ ಯೋಗದ ಮಹತ್ವವನ್ನು ಜಗತ್ತಿಗೆ ಸಾರಿದೆ. ಆರೋಗ್ಯವಂತ ಶರೀರದಲ್ಲಿ ಆರೋಗ್ಯವಂತ ಮನಸ್ಸು ಇರಬೇಕು. ಹಿಂದಿನ ಋಷಿಮುನಿಗಳು ಆರೋಗ್ಯವಂತ ಶರೀರದೊಂದಿಗೆ ವಿಶ್ವದ ಒಳಿತಿಗಾಗಿ ಭಗವಂತನನ್ನು ಆರಾಧನೆ ಮಾಡುತ್ತಿ ದ್ದರು. ಬದುಕುವ ಕಲೆಯನ್ನು ಕಲಿಸಿಕೊಟ್ಟ ಸಂಸ್ಕೃತಿ ನಮ್ಮದಾಗಿದೆ. ಆ ಕಲೆಯನ್ನು ಮುಂದಿನ ಪೀಳಿಗೆ ಅನುಸರಿಸುವ ಅಗತ್ಯವಿದೆ ಎಂದರು.
ನಮ್ಮ ಪೂರ್ವಜರು ನೀತಿ ನಿಯಮಗಳಿಗೆ ಬದ್ದರಾಗಿ ವ್ಯವಸ್ಥಿತವಾಗಿ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಯೋಗ, ಪ್ರಾಣಾಯಾಮ, ಜ್ಞಾನ ಅಳವಡಿಸಿಕೊಂಡು ಬಂದಿದ್ದರು. ಶರೀರದ ಮೇಲೆ ಹಿಡಿತ, ಮನಸ್ಸು, ಇಂದ್ರಿಯಗಳ ಮೇಲ ಹಿಡಿತ ಸಾಧಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಅಂತಹ ಕಲೆ ಯನ್ನು ದೇಶದ ಪ್ರಧಾನಮಂತ್ರಿಗಳು ಅದನ್ನು ಭಾರತಕ್ಕೆ ಸೀಮಿತಗೊಳಿಸದೇ ವಿಶ್ವಕ್ಕೆ ಸಾರುವ ಕೆಲಸ ಮಾಡಿದ್ದಾರೆ. ಆರೋಗ್ಯಯುತವಾದ ಬದುಕುವ ಕಲೆಯನ್ನು ಮುಂದು ವರಿಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದರು.
ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆಯುಷ ಇಲಾಖೆಯ ಹಿರಿಯ ವೈದ್ಯೆ ಅಕ್ಕಮಹಾದೇವಿ ಗಾಣಿಗೇರ ಅವರು ಪ್ರತಿ ವರ್ಷ ಜೂನ್ ೨೧ ರಂದು ಒಂದೊಂದು ಘೋಷವಾಕ್ಯದೊಂದಿಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಯೋಗ ವೆಂದರೆ ಶರೀರ, ಮನಸ್ಸು ಹಾಗೂ ಆತ್ಮ ಒಂದು ಗೂಡಿಸುವುದಾಗಿದೆ. ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಯೋಗ ಶಾಸ್ತ್ರವು ಸಹಾಯಕವಾಗಿದೆ. ಜೂನ್-೨೧ನೇ ದಿವಸವು ಎಲ್ಲ ೩೬೫ ದಿವಸಗಳಲ್ಲಿ ಸೂರ್ಯನ ಕಿರಣಗಳು ಭೂಮಿಯ ಮೇಲೆ ಸುಧೀರ್ಘವಾಗಿ ಸಂಪೂರ್ಣವಾಗಿ ಪಸರಿಸುತ್ತಿರುವ ಹಿನ್ನಲೆಯ ಈ ದಿನದಂದು ಅಂತರಾಷ್ಟ್ರೀಯ ಯೋಗ ದಿವಸವನ್ನಾಗಿ ಆಚರಿಸುವುದು ವಿಶೇಷವಾಗಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಅಪರ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ಅಮರೇಶ ಪಮ್ಮಾರ, ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಎಸ್.ಜಿ.ಮಿರ್ಜಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ, ಮಾಜಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಮೂಹಿಕ ಯೋಗಾಭ್ಯಾಸ
ಭಾರತ ಸೇವಾದಳದ ಜಿಲ್ಲಾ ಸಂಘಟಕ ಮಹೇಶ ಪತ್ತಾರ ಹಾಗೂ ಸಂಗಡಿಗರಿಂದ ಸಾಮಾನ್ಯ ಶಿಷ್ಠಾಚಾರದ ಯೋಗಾಭ್ಯಾಸದಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ನೆರದಿದ್ದ ಎಲ್ಲರಿಗೂ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿಸಿದರು. ಸಾಮೂಹಿಕ ಯೋಗಾ ಭ್ಯಾಸದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಯೋಗ ನಿರತ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಮತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಸೇರಿ ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.