ಬಾಗಲಕೋಟೆ: ಬಾಲ್ಯದಲ್ಲಿ ಅಂದು ಕೊಂಡಂತಹ ಜಿಲ್ಲಾಧಿಕಾರಿಯಾಗುವ ಕನಸನ್ನು ಬಾಗಲಕೋಟೆ ಜಿಲ್ಲೆ ಈಡೇರುವಂತೆ ಮಾಡಿದೆ ಎಂದು ಬಾಗಲಕೋಟೆಯ ನಿಕಟಪೂರ್ವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಶುಕ್ರವಾರ ನಿಕಟಪೂರ್ವ ಜಿಲ್ಲಾಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಕಾರ್ಯಕ್ರಮಲ್ಲಿ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಹಾಸನ ಜಿಲ್ಲೆಯ ಒಂದು ಸಣ್ಣ ಗ್ರಾಮದಲ್ಲಿ ಹುಟ್ಟಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪ್ರಾರಂಭ ಮಾಡಿ 5ನೇ ತರಗತಿಯಲ್ಲಿದ್ದಾಗ ಜಿಲ್ಲಾಧಿಕಾರಿ ಆಗುವ ಕನಸನ್ನು ಕಂಡಿದ್ದೆ. ಆ ಕನಸು ಬಾಗಲಕೋಟೆಯಲ್ಲಿ ನನಸು ಆಗಿದ್ದು, ಈ ಜಿಲ್ಲೆ ನನ್ನ ಮನಸ್ಸಿನಲ್ಲಿ ಅಚ್ಚಳಿಯಾಗಿ ಉಳಿಯುವಂತೆ ಮಾಡಿದೆ ಎಂದರು.
ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ಈ ಎರಡು ವರ್ಷಗಳ ಅವಧಿಯಲ್ಲಿ ಹೆಚ್ಚಿನ ಪ್ರೀತಿ, ವಿಶ್ವಾಸವನ್ನು ಜಿಲ್ಲೆಯ ಜನರು ಮತ್ತು ಅಧಿಕಾರಿ ವರ್ಗದವರು ನೀಡಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಕೆಲಸದ ವಿಷಯಕ್ಕೆ ನಾನು ನಿಮ್ಮಗಳ ಜೊತೆ ಜೋರಾಗಿ ಮಾತಾಡಿದ್ದೀನಿ, ಜಗಳ ಆಡಿದ್ದೀನೀ, ಆದರೆ ನನ್ನನ್ನು ದ್ವೇಷ ಮಾಡುವಂತವರು ಯಾರಿಲ್ಲ ಎಂಬ ದೃಢ ವಿಶ್ವಾಸ ನನಗಿದೆ. ಜಿ.ಪಂ ಸಿಇಒ ಶಶಿಧರ ಕುರೇರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಈ ಇಬ್ಬರು ಸದಾ ನನ್ನ ತಮ್ಮಂದಿರಂತೆ ಜೊತೆಗಿದ್ದು, ಕಾರ್ಯನಿರ್ವಹಿಸಿದ್ದಾರೆ. ಇವರಿಬ್ಬರೂ ವಯಸ್ಸು, ಅನುಭವದಲ್ಲಿ ನನಗಿಂತ ಚಿಕ್ಕವರಾದರು ಪ್ರಜ್ಞಾವಂತಿಕೆ, ಪ್ರೌಡಿಮೆ, ಬದ್ಧತೆಯಲ್ಲಿ ಕಡಿಮೆ ಇಲ್ಲವೆಂದರು.

ಎರಡು ಬಾರಿ ಅಪರ ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡಿದ ಅನುಭವವನ್ನು ನಿಕಟಪೂರ್ವ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಅವರಲ್ಲಿ ಹಂಚಿಕೊಂಡಿದ್ದೆ. ಆ ಅನುಭವ ಮಾತುಗಳಿಂದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನನ್ನಲ್ಲಿನ ಉತ್ತಮ ಗುಣಗಳಿಗೆ ಕಾರಣರಾದ ಎಲ್ಲ ಕನ್ನಡದ ಬರಹಗಾರರಿಗೆ, ಮಹಿಳಾ ಜಿಲ್ಲಾಧಿಕಾರಿಯಾಗಿ ಸಂಭ್ರಮಿಸಿದ ಜಿಲ್ಲೆಯ ಸಮಸ್ತ ಮಹಿಳೆಯರಿಗೆ ಧನ್ಯವಾದಗಳನ್ನು ಹೇಳಿದರು. ಜಿಲ್ಲೆಯ ನೆನಪುಗಳು ಬದುಕಿನೂದ್ದಕ್ಕೂ ನನ್ನ ಜೊತೆಗಿರಲಿವೆ. ಜಿಲ್ಲೆ ಇನ್ನಷ್ಟು ಪ್ರಗತಿಯತ್ತ ಸಾಗಲಿ ಎಂದು ಹೇಳಿದರು.
ನೂತನ ಜಿಲ್ಲಾಧಿಕಾರಿಯಾಗಿ ಆಗಮಿಸಿದ ಸಂಗಪ್ಪ ಎಂ. ಅವರು ನಾನು ಹುಟ್ಟಿ ಬೆಳೆದ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿರುವುದು ನನ್ನ ಭಾಗ್ಯ. ಹಿಂದಿನ ಜಿಲ್ಲಾಧಿಕಾರಿಗಳು ನಡೆಸಿಕೊಂಡ ಬಂದ ಆಡಳಿತವನ್ನು ಮುಂದುವರೆಸಿಕೊಂಡು ಹೋಗುವದರ ಜೊತೆಗೆ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು. ಸಮಸ್ಯೆಯನ್ನು ಹೊತ್ತುಕೊಂಡು ಬಂದವರ ಜೊತೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವದಲ್ಲಿ ಇರುವ ತೃಪ್ತಿ ಬೇರೆನು ಇಲ್ಲ ಎಂದರು.
ಹಿಂದಿನ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ತಹಶೀಲ್ದಾರ, ಉಪವಿಭಾಗಾಧಿಕಾರಿಯಾಗಿ ಕೆಲಸ ಮಾಡುವುದು ಮತ್ತು ಅಪರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವುದು ತುಂಬಾ ಬದಲಾವಣೆ ಇದೆ. ಬಾಗಲಕೋಟೆಯಲ್ಲಿ ಬಹಳಷ್ಟು ವಿಷಯವನ್ನು ಕಲಿತಿದ್ದೇನೆ. ಉತ್ತಮವಾಗಿ ಕಾರ್ಯನಿರ್ವಹಿಸಿದ ತೃಪ್ತಿ ನನಗೆ ಇದೆ. ಇಲ್ಲಿ ಕಲಿತಿರುವ ವಿಷಯ ವಸತಿ ಯೋಜನೆಯ ವ್ಯವಸ್ಥಾಪಕ ನಿದೇರ್ಶಕರ ಹುದ್ದೆ ನಿಭಾಯಿಸಲು ಅನುಕೂಲವಾಗಿದೆ ಎಂದು ಹೇಳಿ ಬಾಗಲಕೋಟೆ ಜಿಲ್ಲೆ ಕುರಿತು ಸ್ವ-ರಚಿತ ಕವನವನ್ನು ಹೇಳಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಸರಕಾರಿ ನೌಕರರಿಗೆ ವರ್ಗಾವಣೆ ಅನಿವಾರ್ಯ. ಆದರೆ ಆ ಅವಧಿಯಲ್ಲಿ ಮಾಡಿದ ಕಾರ್ಯವನ್ನು ಮರೆಯುವಂತಿಲ್ಲ. ಜಿಲ್ಲಾಧಿಕಾರಿಗಳನ್ನು ಹತ್ತಿರದಿಂದ ನೋಡಿದ್ದು, ಅವರಿಂದ ಸಾಕಷ್ಟು ಕಲಿತಿದ್ದೇನೆ. ಪ್ರತಿಯೊಂದು ಅಬಿವೃದ್ದಿ ವಿಷಯದಲ್ಲಿ ಚರ್ಚೆ ಮಾಡಿ ಮುಂದುವರೆಯುತ್ತಿದ್ದೇವೆ. ಇದರಿಂದ ಎಲ್ಲ ಕೆಲಸಗಳು ಸರಾಗವಾಗಿ ನಡೆಯತ್ತಿದ್ದವು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಜವಾಬ್ದಾರಿ ಹೆಚ್ಚಾದಾಗ ಬಹಳಷ್ಟು ತಾಳ್ಮೆ ಇರಬೇಕಾಗುತ್ತದೆ. ಅಂತಹ ತಾಳ್ಮೆ ಅವರಲ್ಲಿ ಇತ್ತು. ಪ್ರತಿಯೊಂದು ಸಂದರ್ಭದಲ್ಲಿ ಸಲಹೆಗಳನ್ನು ನೀಡಿದ್ದರಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.