ಬಾಗಲಕೋಟೆ: ಬೀಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತ ಕಾಖಂಡಕಿ ಅವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೆಪಿಸಿಸಿ ಸಂಯೋಜಕರು, ರಾಜ್ಯ ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರವೀಣಗೌಡ ಪಾಟೀಲ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಗುರುವಾರ ರಾತ್ರಿ 10ರ ಸುಮಾರಿಗೆ ನನಗೆ ಕಾಖಂಡಕಿ ಅವರು ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೀಳಗಿಯಲ್ಲಿ ನನಗೆ ಹೇಳದೆ ಪಕ್ಷದ ಯುವಕರನ್ನು ಸಂಘಟನೆ ಮಾಡುತ್ತಿದ್ದೀಯಾ ಅದನ್ನು ಬಿಡಬೇಕು ಇಲ್ಲದಿದ್ದರೆ ನಿನ್ನ ಜೀವ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದರು.
ಇಷ್ಟೇ ಅಲ್ಲದೇ ಅವರ ಮಗನಿಂದ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಜಿಪಂ ಮಾಜಿ ಸದಸ್ಯ ಹಾಗೂ ಈಗ ಬೀಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತ ಕಾಖಂಡಕಿ ಅವರು ಬೆದರಿಕೆ ಹಾಕುತ್ತಿದ್ದಾರೆ. ಪಕ್ಷಕ್ಕೆ ಹಾಗೂ ನನಗೆ ಧಕ್ಕೆ ತರುತ್ತಿದ್ದಾರೆ ಎಂದು ಆಪಾದಿಸಿದರು.
ಕಾಖಂಡಕಿ ಅವರು ಹಲವಾರು ಅಮಾಯಕರ ಮೇಲೆ ದಬ್ಬಾಳಿಕೆ ಮಾಡುತ್ತಿ ದ್ದಾರೆ. ಈಗಾಗಲೇ ಎಲ್ಲ ಘಟನೆಗಳ ಬಗ್ಗೆ ಶಾಸಕರಾದ ಜೆ.ಟಿ.ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರ ಗಮನಕ್ಕೆ ತಂದಿದ್ದು, ಅಲ್ಲದೇ ರಾಜ್ಯ ನಾಯಕರಿಗೂ ತಿಳಿಸಿದ್ದೇನೆ. ಕೂಡಲೇ ಕಾಖಂಡಕಿ ಅವರ ವಿರುದ್ಧ ಪಕ್ಷ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರನ್ನು ನೀಡುತ್ತೇನೆ ಎಂದರು.