ಬಾಗಲಕೋಟೆ: ನನ್ನನ್ನು ನೌಕರಿಗೆ ನೇಮಿಸಿ ಕೊಳ್ಳಿ ಇಲ್ಲವೆ ದಯಾಮರಣಕ್ಕೆ ಅವಕಾಶ ನೀಡಿ, ಎಂದು ಜಿಲ್ಲಾ ಆಯುಷ್ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ ವಿಜಯಲಕ್ಷ್ಮೀ ಸರೂರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಹುನಗುಂದ ತಾಲೂಕು ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವೇಳೆ ೨೦೨೩ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದ ಕಾರಣ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೆಲಸದಿಂದ ನನ್ನನ್ನು ವಜಾಗೊಳಿಸಲಾಗಿದೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದೆ. ನ್ಯಾಯಾಲಯವು ೨೦೨೫ರ ಜನವರಿ ೧೬ರಂದು ಮರಳಿ ಕೆಲಸಕ್ಕೆ ಸೇರ್ಪಡೆಗೊಳಿಸುವಂತೆ ಆದೇಶ ನೀಡಿದೆ ಎಂದರು.
ನ್ಯಾಯಾಲಯದ ಆದೇಶ ಬಂದು ಈಗಾಗಲೇ ನಾಲ್ಕು ತಿಂಗಳು ಕಳೆದರೂ, ಸಂಬಂಧಿತ ಅಧಿಕಾರಿಗಳು ಸೇವೆಗೆ ಸೇರಿಸಿಕೊಳ್ಳಲು ಮೀನ-ಮೇಷ ಎಣಿಸುತ್ತಿ ದ್ದಾರೆ. ಇದು ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಬರುತ್ತದೆ. ಒಂದು ವಾರದೊಳಗಾಗಿ ಮತ್ತೆ ಕೆಲಸಕ್ಕೆ ಸೇರಿಸಿ ಕೊಳ್ಳದಿದ್ದರೆ ಜಿಲ್ಲಾ ಆಯುಷ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.
ಏತನ್ಮಧ್ಯೆ ಸರ್ಕಾರಿ ವಸತಿ ಗೃಹಕ್ಕೆ ಅಧಿಕಾರಿಗಳನ್ನು ಯಾರು ಕರೆಸಿದ್ದರು ಎಂಬುದಕ್ಕೆ ಸಂಬಂಧಿಸಿದ ಆಡಿಯೋ ಸಾಕ್ಷ್ಯವನ್ನು ಹೊರಹಾಕುವುದಾಗಿ ಅವರುತಿಳಿಸಿದ್ದಾರೆ.