ಬಾಗಲಕೋಟೆ: ಯೋಗವು ಜಗತ್ತಿನ ಉದ್ದಗಲಕ್ಕೂ ವ್ಯಾಪಿಸಿದ್ದು, ದೈಹಿಕ ಹಾಗೂ ಮನೋಬಲವನ್ನು ಜೋಡಿಸುವುದೇ ಯೋಗವಾಗಿದೆ. ಯೋಗಕ್ಕೆ ಒಂದುಗೂಡಿಸುವ ಶಕ್ತಿ ಇದೆ ಎಂದು ಉಡುಪಿ ಪೇಜಾವರ ಮಠದ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಹೇಳಿದರು.

ಬಿವಿವಿ ಸಂಘದ ಕಲಾ, ವಿಜ್ಞಾನ, ವಾಣಿಜ್ಯ ಶಿಕ್ಷಣ ಮಹಾವಿದ್ಯಾಲಯಗಳು ಮತ್ತು ಆಯುರ್ವೇದ, ಹೋಮಿಯೋಪತಿ ಕಾಲೇಜುಗಳು ಹಾಗೂ ನರ್ಸಿಂಗ್, ಪಾಲಿಟೆಕ್ನಿಕ್, ಅಕ್ಕಮಹಾದೇವಿ ಮಹಿಳಾ ಕಾಲೇಜು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಹಯೋಗದಲ್ಲಿ ಶನಿವಾರ ಸಂಘದ ಮೈದಾನದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಯೋಗಾಭ್ಯಾಸದಲ್ಲಿ ಭಾಗವಹಿಸಿ, ಸ್ವತಃ ಯೋಗ ಮಾಡಿ ಮಾತನಾಡಿದ ಅವರು, ಯೋಗ ಎಂದರೆ ಕೂಡಿಸುವುದು, ಜೋಡಿಸುವುದು ಆಗಿದೆ. ಶರೀರದಲ್ಲಿ ಸ್ವಾಸ್ಥ್ಯವನ್ನು ಕೂಡಿಸುವುದೇ ಯೋಗವಾಗಿದೆ. ದೈಹಿಕ ಸ್ವಾಸ್ಥ್ಯ, ಮಾನಸಿಕ ಸ್ವಾಸ್ಥ್ಯ ಕೂಡಿಕೊಂಡು ಧ್ಯಾನದ ಸ್ವಾಸ್ಥ್ಯದ ಮೂಲಕ ಆತ್ಮವನ್ನು ಭಗವಂತನಲ್ಲಿ ಸಾಕ್ಷಾತ್ಕಾರಗೊಳಿಸುವ ವಿದ್ಯೆಯೇ ಯೋಗವಾಗಿದೆ. ಭಾರತೀಯ ಎಲ್ಲ ಶಾಸ್ತ್ರಗಳ ಪರಮ ಗುರಿ ಭಗವಂತನನ್ನು ಸೇರುವುದು, ಅದು ಮೋಕ್ಷ. ಅದಕ್ಕೆ ಯೋಗದ ಮುಖಾಂತರ ಮನುಷ್ಯನಿಗೆ ದೈಹಿಕ ಬಲ, ಮನೋಬಲವನ್ನು ಕೂಡಿಸಿ ಭಗವಂತನ ಜೊತೆ ಕೂಡಿಸುವ ಶಕ್ತಿ ಯೋಗಕ್ಕಿದೆ. ಈ ವಿದ್ಯೆ ಇಂದಿನ ಎಲ್ಲ ಕಾಲಘಟ್ಟದಲ್ಲಿಯೂ ಪ್ರಸ್ತುತ. ಹಿಂದಿನ ಕಾಲದ ಬದುಕಿನ ಪ್ರತಿ ನಡೆಯೂ ಕೂಡಾ ಒಂದೊಂದು ಯೋಗಾಭ್ಯಾಸವಾಗಿತ್ತು. ಆದರೆ ಇವತ್ತು ನಾವು ಬದುಕಿಗೆ ಯಂತ್ರಗಳನ್ನು ಬಹುವಾಗಿ ಅವಲಂಬಿಸಿದ್ದೇವೆ, ನಮ್ಮ ಬದುಕು ಯಾಂತ್ರಿಕ ಬದುಕಾಗಿದೆ. ಈ ಹಂತದಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವಂತಹ ವ್ಯಾಯಾಮ ದೊರಕದೆ ಹೋದಾಗ ಅನಾರೋಗ್ಯಕ್ಕೆ ಒಳಗಾಗುತ್ತದೆ. ಇದನ್ನು ಮನಗಂಡ ನಮ್ಮ ಪ್ರಾಚೀನ ಋಷಿಮುನಿಗಳು ಇಂತಹ ಯೋಗ ವಿದ್ಯೆಯನ್ನು ನೀಡಿದ್ದಾರೆ. ಇಂದಿನ ಪೀಳಿಗೆ ಜೀವನದಲ್ಲಿ ಯೋಗವನ್ನು ಹೆಚ್ಚು ಅಳವಡಿಸಿಕೊಳ್ಳಬೇಕು. ಸಂಘ ಹಾಗೂ ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಅವರು ಬೃಹತ್ ಯೋಗವನ್ನು ಸಂಘಟಿಸಿರುವುದು ಶ್ಲಾಘನೀಯ ಎಂದರು.

ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಅವರು ಮಾತನಾಡಿ, ಯೋಗ ಈ ದೇಶದ ಆತ್ಮಸಾಕ್ಷಾತ್ಕಾರದ ಒಂದು ಮಾರ್ಗವಾಗಿದೆ. ದೇಹ ಹಾಗೂ ಮನಸ್ಸಿನ ನಿಯಂತ್ರಣಕ್ಕೆ ಯೋಗ ಅಗತ್ಯವಾಗಿದೆ. ನಾಡಿನ ಉಡುಪಿ ಪೇಜಾವರ ಮಠದ ಶ್ರೀಗಳಾದ ಪೂಜ್ಯ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಯೋಗದಲ್ಲಿ ಪಾಲ್ಗೊಂಡು ಮಾರ್ಗದರ್ಶನ ಮಾಡಿದ್ದು ನಮ್ಮೆಲ್ಲರ ಭಾಗ್ಯ ಎಂದರು.
45 ನಿಮಿಷಗಳ ಕಾಲ ವಿವಿಧ ಆಸನಗಳನ್ನು ಪ್ರದರ್ಶಿಸುವ ಮೂಲಕ ಯೋಗದ ಮಹತ್ವವನ್ನು ಸಾರಿದರು. ಪ್ರದರ್ಶನದಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ 5 ಸಾವಿರಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳುವ ಮೂಲಕ ತಡಾಸನ, ಮನಸ್ಸು ಶಾಂತವಾಗಿಟ್ಟುಕೊಳ್ಳುವ ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ಭದ್ರಾಸನ, ವಜ್ರಾಸನ, ಭುಜಂಗಾಸನ, ಶಲಭಾಸನ, ಸೇತು ಬಂದಾಸನ, ಪವನಮುಕ್ತಾಸನ, ಶವಾಸನ, ಪ್ರಾಣಾಯಾಮ, ಧ್ಯಾನ ಸೇರಿದಂತೆ ವಿವಿಧ ಆಸನಗಳನ್ನು ಪ್ರದರ್ಶಿಸಲಾಯಿತು. ನಂತರ ಬಿವಿವಿಎಸ್ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಂದ ಮಾಡರ್ನ್ ಯೋಗ ನೃತ್ಯ ಜನಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಆಯುರ್ವೇದ ಹಾಗೂ ಹೋಮಿಯೋಪತಿ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಪಂಡಿತ್ ಅರಬ್ಬಿ, ಎಸ್.ಆರ್. ಮನಹಳ್ಳಿ, ಶಿವಲಿಂಗಪ್ಪ ಮೋರಬ, ಕುಮಾರ ಜಿಗಜಿನ್ನಿ ಸೇರಿದಂತೆ ಸಂಘದ ಎಲ್ಲ ಸದಸ್ಯರುಗಳು, ಸಂಘದ ಮುಖ್ಯ ಸಲಹೆಗಾರರಾದ ಡಾ. ಮೀನಾ ಚಂದಾವರಕರ, ಆಡಳಿತಾಧಿಕಾರಿಗಳು, ವಿವಿಧ ಮಹಾವಿದ್ಯಾಲಯಗಳ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯೋಗಾ ಪ್ರೋಟೋಕಾಲ್ ನಿರೂಪಣೆಯನ್ನು ಆಯುರ್ವೇದ ಮಹಾವಿದ್ಯಾಲಯದ ಯೋಗಾ ವಿಭಾಗದ ಸಹಪ್ರಾಧ್ಯಾಪಕಿ ಡಾ. ವೀಣಾ ಪತ್ತಾರ್ ನಿರೂಪಿಸಿದರು. ಯೋಗಗೀತೆಯನ್ನು ವೈಷ್ಣವಿ ಜಾದವ್ ಹಾಡಿದರು. ಡಾ. ವಿ.ಎಸ್. ಚೌದರಿ ವಂದಿಸಿದರು.