ಬಾಗಲಕೋಟೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದು ಹಲ್ಲೆ ನಡೆಸಲು ಯತ್ನಿಸಿದ ದಾಳಿಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಜೈ ಭೀಮ ಸಂಘಟನೆ ತೀವ್ರವಾಗಿ ಖಂಡಿಸಿದೆ.
ಗುರುವಾರ ನವನಗರದ ಜಿಲ್ಲಾಡಳಿತ ಭವನ ಎದುರು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಪತ್ರವೊಂದನ್ನು ಸಲ್ಲಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿಯನ್ನು ಗೌರವಯುತವಾಗಿ ಸ್ವೀಕರಿಸಬೇಕು. ಅದುವೇ ಪ್ರಜಾಪ್ರಭುತ್ವ. ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಬೇಕಾದ ವಕೀಲರೊಬ್ಬರು ಅನುಚಿತ ವರ್ತನೆ ಮಾಡಿರುವುದನ್ನು ಯಾರೊಬ್ಬರು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ವಕೀಲರೊಬ್ಬರು ಅನುಚಿತವಾಗಿ ವರ್ತಿಸಿದ ವೇಳೆಯೂ ಮುಖ್ಯ ನ್ಯಾಯಮೂರ್ತಿಗಳು ತೋರಿದ ಸಂಯಮ, ಶಾಂತತೆ ,ನ್ಯಾಯದ ಮೌಲ್ಯಗಳು ತೋರಿದ ಗೌರವ ಎಲ್ಲರಿಗೂ ಮಾದರಿಯಾಗಿದೆ. ಅನುಚಿತವಾಗಿ ವರ್ತನೆ ಮಾಡಿದಂತ ವಕೀಲರನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಣಮಂತ ಚಿಮ್ಮಲಗಿ, ಶಂಕ್ರಪ್ಪ ದೊಡಮನಿ, ಮಾರುತಿ ಮರೆಗುದ್ದಿ, ಮಾರುತಿ ಬಾವಿಕಟ್ಟಿ, ಲಕ್ಷ್ಮಣ ದೊಡಮನಿ, ನಾಗಪ್ಪ ದೊಡಮನಿ, ರಮೇಶ ಪೂಜಾರಿ, ಮೌನೇಶ ಜೈಮುನಿ, ಪರಶುರಾಮ ಮಾಂಗ ಸೇರಿದಂತೆ ಸಂಘಟನೆ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.