ಬಾಗಲಕೋಟೆ: ಅಳಿವಿನ ಅಂಚಿನಲ್ಲಿದ್ದ ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಮರು ಮುದ್ರಣಗೊಳಿಸಿ ಅವುಗಳಿಗೆ ಮರುಜೀವ ಕೊಟ್ಟವರು ಡಾ|| ಫ.ಗು.ಹಳಕಟ್ಟಿ ಎಂದು ಜಿಲ್ಲಾಧಿಕಾರಿ ಸಂಗಪ್ಪ ಎಂ ಹೇಳಿದರು.
ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಭಾಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಫ.ಗು.ಹಳಕಟ್ಟಿ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಚನ ಸಾಹಿತ್ಯ ಕ್ಷೇತ್ರದಲ್ಲಿ ಕೇವಲ ೫೦ ಜನ ಇದ್ದರು. ೨೫೦ ವಚನಕಾರರನ್ನು ಗುರುತಿಸಿ ಅವರೆಲ್ಲರ ವಚನಗಳನ್ನು ಸಂಗ್ರಹಿಸುವ ಕಾರ್ಯ ಮಾಡಿದ್ದಾರೆ ಎಂದರು.
ವಿಜಯಪುರದಲ್ಲಿ ನೆಲೆ ಊರಿದ ಹಳಕಟ್ಟಿಯವರು ನಶಿಸಿ ಹೋಗುತ್ತಿರುವ ವಚನ ಸಾಹಿತ್ಯಗಳಿಗೆ ಮರುಜೀವ ತುಂಬುವ ನಿಟ್ಟಿನಲ್ಲಿ ತಮ್ಮ ಆಸ್ತಿಯನ್ನು ಮಾರಿ ಸ್ವಂತ ಮುದ್ರಣಾಲಯವನ್ನು ಪ್ರಾರಂಭಿಸಿದರು. ಪ್ರಥಮ ಕನ್ನಡ ಶಾಲೆ ಹಾಗೂ ಮಹಿಳೆಯರಿಗಾಗಿಯೇ ಪ್ರತ್ಯೇಕ ಶಾಲೆಯನ್ನು ಪ್ರಾರಂಭಿಸಲು ಕಾರಣೀ ಭೂತರಾದವರು. ಅಲ್ಲದೇ ಬಿ.ಎಲ್.ಡಿ ಶಿಕ್ಷಣ ಸಂಸ್ಥೆ, ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಸ್ಥಾಪಿಸಿದವರಾಗಿದ್ದಾರೆ. ಅಂದಿನ ಕಾಲದಲ್ಲಿ ಬೂತನಾಳ ಕೆರೆ ಸಹ ನಿರ್ಮಾಣ ಮಾಡಿದವರು ಹಳಕಟ್ಟಿಯವರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ ಮಾತನಾಡಿ ಹಳಕಟ್ಟಿಯವರು ಕೇವಲ ವಚನ ಸಾಹಿತ್ಯಗಳನ್ನು ಸಂಗ್ರಹಿಸುವ ಕಾರ್ಯವಲ್ಲದೇ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಾಗಿದ್ದಾರೆ. ತಮ್ಮ ಬಡತನದ ಜೀವನದಲ್ಲಿಯೇ ೧೦ ಸಾವಿರ ವಚನಗಳನ್ನು ಮರು ಮುದ್ರಣ ಮಾಡಿದ ಕೀರ್ತಿ ಅವರದ್ದಾಗಿದೆ. ಮಕ್ಕಳು ಮೊಬೈಲ್ಗಳಿಗೆ ದಾಸರಾಗದೇ ಹಳಕಟ್ಟಿಯವರು ಸಂಗ್ರಹಿಸಿದ ವಚನ ಸಾಹಿತ್ಯದ ಪುಸ್ತಕಗಳನ್ನು ಓದುವ ಮೂಲಕ ದೇಶದ ಭವಿಷ್ಯ ರೂಪಿಸುವಂತವರಾಗಬೇಕು ಎಂದು ತಿಳಿಸಿದರು.
ಸಮುದಾಯದ ಮುಖಂಡರಾದ ಡಾ.ಎಂ.ಎಸ್.ದಡ್ಡೇನವರ ಮಾತನಾಡಿ ಫ.ಗು.ಹಳಕಟ್ಟಿಯವರು ಬಡತನದಲ್ಲಿದ್ದರೂ ಅಂದಿನ ಕಾಲದಲ್ಲಿ ವಕೀಲರಾಗಿದ್ದರು. ಮುದ್ರಣ ರಂಗ, ಪತ್ರಿಕಾರಂಗ, ಸಹಕಾರಿ ರಂಗ ಹಾಗೂ ಸಾಹಿತ್ಯ ರಂಗಗಳಲ್ಲದೇ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದರ ಫಲವಾಗಿ ಇಂದು ವಿಜಯಪುರ ಬಿ.ಎಲ್.ಡಿ ಹಾಗೂ ಭೂತನಾಳ ಕೆರೆ, ಸಿದ್ದೇಶ್ವರ ಬ್ಯಾಂಕ್ ತಲೆ ಬೃಹದಾಕಾರವಾಗಿ ಬೆಳೆದು ನಿಂತಿವೆ ಎಂದರು. ಇನ್ನೋರ್ವ ಮುಖಂಡರಾದ ಶ್ರೀನಿವಾಸ ಬಳ್ಳಾರಿ ಅವರು ಹಳಕಟ್ಟಿಯವರ ಸಮಾಜಕ್ಕೆ ನೀಡಿದ ಆದರ್ಶ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಮಹಾದೇವ ಬಸರಕೋಡ ಮಾತನಾಡಿ ಸಾಮಾನ್ಯ ಮನೆತನದಿಂದ ಬಂದಂತಹ ವ್ಯಕ್ತಿ ಬಹುದೊಡ್ಡ ಶಕ್ತಿಯಾಗಿ ಬೆಳೆಯಲು ವಚನ ಸಾಹಿತ್ಯವನ್ನು ಹೊರ ತೆಗೆದು ಪ್ರಚಲಿತಗೊಳಿಸುವಲ್ಲಿ ಅಪರೂಪದ ಕಾಯಕ ಮಾಡಿದವರ ಹಳಕಟ್ಟಿಯವರು. ವಚನ ಸಾಹಿತ್ಯ ರಕ್ಷಿಸುವ ಕಾರ್ಯ ಮಾಡದೇ ಇದ್ದಲ್ಲಿ ಇಂದು ನಾವು ಯಾವ ವಚನಗಳನ್ನು ಕಾಣುತ್ತಿರಲಿಲ್ಲ. ವಚನದ ಸಾಹಿತ್ಯ ಬೇರೆ ಬೇರೆ ರಾಷ್ಟ್ರಗಳಲ್ಲಿ ಪ್ರಸಿದ್ದಿಗೊಂಡಿದ್ದನ್ನು ನೋಡಿದಾಗ ಇದಕ್ಕೆ ಪ್ರೇರಣೆಯಾದ ವ್ಯಕ್ತಿ ಹಳಕಟ್ಟಿ ಎಂದರು.
ಈ ಸಂದರ್ಭದಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ.ಮಿರ್ಜಿ, ತಹಶೀಲ್ದಾರ ಅಮರೇಶ ಪಮ್ಮಾರ, ಬಾಲಕಿಯರ ಸರಕಾರಿ ಪ.ಪೂ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಜೋಗೂರ, ಉಪ ಪ್ರಾಚಾರ್ಯ ಗಿರಿಹಾ ನಡುವಿನಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.