
ಸಮೂಹ ಸಂವಹನ ವಿಭಾಗದಲ್ಲಿ ತುಮಕೂರು ವಿವಿಗೆ ಪ್ರಥಮ ರ್ಯಾಂಕ್
ಕಲ್ಪತರು ನಾಡಲ್ಲಿ ಬಾಗಲಕೋಟೆ ಹುಡ್ಗ ಸಂಗಮೇಶ ಸಾಧನೆ
* ರಾಜ್ಯಪಾಲರಿಂದ ಚಿನ್ನದ ಪದಕ ಮುಡಿಗೇರಿಸಿಕೊಂಡ
ವಿದ್ಯಾರ್ಥಿ
* ತಂದೆ ಅಗಲಿಕೆಯ ನೋವಲ್ಲೂ ಚಿನ್ನದ ಪದಕ ಸ್ವೀಕರಿಸಿದ
ಪುತ್ರ
* ಚಾಲುಕ್ಯರಾಳಿದ ನಾಡಿನ ವಿದ್ಯಾರ್ಥಿಯ ಸಾಧನೆ*
ಬಾಗಲಕೋಟೆ; ಸಾಧನೆ ಮಾಡಲೇಬೇಕು ಅಂದುಕೊಂಡು ಛಲ, ಸ್ಪಷ್ಟ ಗುರಿ ಹಾಗೂ ಗುರುಗಳ ಮಾರ್ಗದರ್ಶನ ಪಡೆದು ಶ್ರದ್ಧೆಯಿಂದ ಅಧ್ಯಯನದಲ್ಲಿ ನಿರತರಾಗಿ ಓದಿದರೆ ಸಾಧನೆ ಅನ್ನೋದು ಕಬ್ಬಿಣದ ಕಡಲೆ ಅಲ್ಲವೇ ಅಲ್ಲ, ಜತೆಗೆ ಯಾವುದೇ ಹಳ್ಳಿ-ಬಡತನ ಅಡ್ಡಿಯಾಗದು ಎನ್ನುವುದಕ್ಕೆ ಅಪ್ಪಟ ಹಳ್ಳಿಗಾಡಿನ ರೈತ ಕುಟುಂಬದ ವಿದ್ಯಾರ್ಥಿ ಸಂಗಮೇಶ(ಸಂಗಪ್ಪ) ‘ಚಿನ್ನದ ಪದಕ’ ಪಡೆಯುವ ಮೂಲಕ ಸಾಕ್ಷಿಯಾಗಿದ್ದಾರೆ.
ಹೌದು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಎಂಬ ಚಿಕ್ಕ ಗ್ರಾಮದ ರೈತ ಹಣಮಂತ ಜೀರಗಾಳ ಅವರ ಪುತ್ರ ಸಂಗಮೇಶ. ತನ್ನೂರಿಂದ 500 ಕಿ.ಮೀ ದೂರದ ಕಲ್ಪತರು ನಾಡಿನತ್ತ ಉನ್ನತ ಶಿಕ್ಷಣದ ವ್ಯಾಸಂಗಕ್ಕೆ ಪಯಣ ಬೆಳೆಸಿ, ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಎರಡು ವರ್ಷದ ಸ್ನಾತಕೋತ್ತರ ಪದವಿ ಓದಿದ ಸಂಗಮೇಶ ಅವರು ಎಂ.ಎಸ್ಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ತುಮಕೂರು ವಿಶ್ವವಿದ್ಯಾಲಯಕ್ಕೆ ‘ಪ್ರಥಮ ರ್ಯಾಂಕ್’ ಪಡೆದುಕೊಂಡು ‘ಚಿನ್ನದ ಪದಕ'(ಗೋಲ್ಡ್ ಮೆಡಲ್) ಗೆ ಮುತ್ತಿಟ್ಟಿದ್ದಾರೆ.
ಇತ್ತಿಚೆಗೆ ನಡೆದ ತುಮಕೂರು ವಿಶ್ವವಿದ್ಯಾಲಯದ 17 ನೇ ಘಟಿಕೋತ್ಸವ ಸಮಾರಂಭದಲ್ಲಿ ‘ಸಂಗಮೇಶ ಜೀರಗಾಳ’ ರವರು ರಾಜ್ಯಪಾಲರಾದ ಡಾ. ಥಾವರ್ ಚಂದ್ ಗೆಹ್ಲೋಟ್ ಅವರಿಂದ ‘ಚಿನ್ನದ ಪದಕ’ ಹಾಗೂ ‘ಪ್ರಥಮ ರ್ಯಾಂಕ್’ ಪ್ರಮಾಣ ಪತ್ರವನ್ನು ಪಡೆದು ಬಾಗಲಕೋಟೆ ಜಿಲ್ಲೆಯ ಕೀರ್ತಿ ಇಮ್ಮಡಿಗೊಳಿಸಿದ್ದಾರೆ.
ಗೋಲ್ಡ್ ಮೆಡಲಿಸ್ಟ್ ಸಂಗಮೇಶ ಪ್ರಥಮ ರ್ಯಾಂಕ್ ಗಳಿಸಿರುವ ವಿಷಯವನ್ನ ತನ್ನ ತಂದೆಗೆ ಸರ್ಪ್ರೈಸ್ ಆಗಿ ವಿವಿ ಘಟಿಕೋತ್ಸವದಲ್ಲಿ ತಿಳಿಸಿ ಸಂಭ್ರಮಿಸಬೇಕು ಅಂದುಕೊಂಡಿದ್ದ, ಆದರೆ ಕಳೆದ ಏಳು ತಿಂಗಳ ಹಿಂದೆ ಅಕಾಲಿಕ ಮರಣದಲ್ಲಿ ತಂದೆಯನ್ನ ಕಳೆದುಕೊಂಡು ತನ್ನ ಸಾಧನೆ ಹೆತ್ತಪ್ಪನಿಗೆ ತಿಳಿಸಲು ಆಗಲ್ಲ ಎನ್ನುವ ನೋವಿನ ಜತೆಯಲ್ಲೇ ತಂದೆ ಹೇಳಿದಂತೆ ಹೆಮ್ಮೆ ಹಾಗೂ ಹೆಸರು ತರುವಂತಹ ಸಾಧನೆ ಮಾಡಿರುವ ಖುಷಿ ಮನಸಿನಲ್ಲಿಟ್ಟುಕೊಂಡು ರಾಜ್ಯಪಾಲರಿಂದ ‘ಸ್ವರ್ಣ ಪದಕ’ವನ್ನು ಸ್ವೀಕರಿಸಿದರು.
ಸಂಗಮೇಶ ಅವರು ಬಾಗಲಕೋಟೆ ಜಿಲ್ಲೆಯಲ್ಲೇ ಪದವಿ ವರೆಗೂ ವ್ಯಾಸಂಗ ಮುಗಿಸಿದರು. ಸದ್ಯ ತಂದೆಯ ಅಗಲಿಕೆಯಿಂದ ತಾಯಿ, ಸಹೋದರಿಯರು ಸೇರಿ ಕುಟುಂಬದ ಜವಬ್ದಾರಿಯನ್ನು ಹೊತ್ತು, ಬೆಂಗಳೂರು ನಗರದ ಪ್ರತಿಷ್ಠಿತ ಕನ್ನಡ ದಿನಪತ್ರಿಕೆ ಕಛೇರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ.